ಆರಂಭದಲ್ಲೇ ಹೊಳೆಯಲ್ಲಿ ತೇಲಿಬರುವ ಯುವತಿಯ ಶವವನ್ನು ಕಂಡು ಮೀನುಗಾರರು ಸ್ಥಳೀಯ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸುತ್ತಾರೆ. ಆ ಕೇಸ್ ಹಿಂದೆ ಹೊರಟ ಪೋಲಿಸ್ ಇನ್ಸ್ ಪೆಕ್ಟರ್ ಕಾರ್ತೀಕ್ (ವಿಜಯ ರಾಘವೇಂದ್ರ) ಅದು ಕೊಲೆಯೋ ಆತ್ಮಹತ್ಯೆಯೋ ಎಂಬುದನ್ನು ಪತ್ತೆಹಚ್ಚುವ ತನಿಖೆಯ ಹಾದಿಯೇ ಓ ಮನಸೇ ಚಿತ್ರದ ಇಂಟರೆಸ್ಟಿಂಗ್ ಕಂಟೆಂಟ್.
ಹೀಗೆ ಆರಂಭವಾಗುವ ಓ ಮನಸೇ ಚಿತ್ರದ ಕಥೆ ಎಳೆಎಳೆಯಾಗಿ ತೆರೆದುಕೊಳ್ಳುತ್ತ ಹೋಗುತ್ತದೆ. ಕ್ರೈಮ್ ಹಿನ್ನೆಲೆಯಲ್ಲಿ ನಡೆಯೋ ತ್ರಿಕೋನ ಪ್ರೇಮಕಥೆಯನ್ನು ನಿರ್ದೇಶಕ ಉಮೇಶ್ಗೌಡ ಅವರು ತುಂಬಾ ಕುತೂಹಲಕಾರಿಯಾಗಿ ತೆರೆಮೇಲೆ ಮೂಡಿಸಿದ್ದಾರೆ, ಬಹುತೇಕ ಚಿತ್ರದ ಕಥೆ ನಡೆಯುವುದು ಮಡಿಕೇರಿಯಲ್ಲಿ. ಬೆಂಗಳೂರಿನಿಂದ ಮಡಿಕೇರಿಗೆ ವರ್ಗವಾಗಿ ಬರುವ ಸರ್ಕಲ್ ಇನ್ಸ್ ಪೆಕ್ಟರ್ ಕಾರ್ತೀಕ್(ವಿಜಯ ರಾಘೇಂದ್ರ)ಗೆ ಠಾಣೆಯಲ್ಲಿ ಮೊದಲು ಪರಿಚಯವಾಗುವುದೇ ನಾಯಕಿ. ತನ್ನ ಗೆಳತಿಗೆ ಅನಾಮಿಕನೊಬ್ಬ ಆಗಾಗ ಲವ್ ಲೆಟರ್ ಬರೆದು ಕಾಟ ಕೊಡುತ್ತಿರುತ್ತಾನೆ. ಆ ವ್ಯಕ್ತಿಯ ಮೇಲೆ ಕಂಪ್ಲೇಂಟ್ ನೀಡಲು ಸ್ಟೇಷನ್ಗೆ ಬರುವ ಸ್ನೇಹಾ (ಸಂಚಿತಾ ಪಡುಕೋಣೆ)ಗೆ ಇನ್ಸ್ ಪೆಕ್ಟರ್ ಕಾರ್ತಿಕ್ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೆಳುತ್ತಾರೆ. ಆಗಿಂದ ಬೆಳೆದ ಪರಿಚಯ ಸ್ನೇಹಕ್ಕೆ ತಿರುಗುತ್ತದೆ, ಸ್ನೇಹಳ ಮುಗ್ಧ ನಡವಳಿಕೆ, ಸೌಂದರ್ಯಕ್ಕೆ ಮನಸೋತ ಕಾರ್ತಿಕ್ ಆಕೆಯನ್ನು ಮದುವೆಯಾಗಲು ನಿರ್ಧರಿಸಿ ಒಮ್ಮೆ ಈ ವಿಷಯವನ್ನು ಆಕೆಗೆ ತಿಳಿಸುತ್ತಾನೆ. ಇದರ ಬಗ್ಗೆ ತನ್ನ ನಿರ್ಧಾರ ಹೇಳಲು ತನ್ನನ್ನು ತಲಕಾವೇರಿಯ ಕಾವೇರಮ್ಮನ ಸನ್ನಿಗೆ ಕರೆದುಕೊಂಡು ಹೋಗಲು ಸ್ನೇಹಾ ತಿಳಿಸುತ್ತಾಳೆ. ಅಲ್ಲಿಗೆ ಹೋದಾಗ ತಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿವ ಹುಡುಗ ಕೀರ್ತಿಯ (ಧರ್ಮ ಕೀರ್ತಿರಾಜ್) ಬಗ್ಗೆ ತಿಳಿಸಿ, ಸದ್ಯದಲ್ಲೇ ತಾವಿಬ್ಬರೂ ಮದುವೆಯಾಗುತ್ತಿರುವುದಾಗಿಯೂ ಹೇಳುತ್ತಾಳೆ. ಆದರೆ ವಿಧಿಯ ಆಟವೇ ಬೇರೆಯಾಗಿರುತ್ತದೆ, ಮದುವೆಯಾಗುವ ಮುನ್ನವೇ ಸ್ನೇಹ ವಿಷಪ್ರಾಶನದಿಂದ ನದಿಯಲ್ಲಿ ಮುಳುಗಿ ಸತ್ತು ಹೋಗುತ್ತಾಳೆ, ಇಲ್ಲಿಂದ ಕತೆಗೆ ಹೊಸ ತಿರುವು ಸಿಗುತ್ತದೆ. ಸ್ನೇಹಾಳದ್ದು ಆತ್ಮಹತ್ಯೆಯೋ... ಅಥವಾ ಕೊಲೆಯೂ... ಯಾರ ದ್ವೇಶವನ್ನೂ ಕಟ್ಟಿಕೊಳ್ಳದ ಸ್ನೇಹಳಿಗೆ ಹಾವಿನ ವಿಷವುಣಿಸಿ ನದಿಗೆ ಬೀಳಿಸಿದವರು ಯಾರು, ಕಾರಣವೇನು ಈ ಎಲ್ಲ ಕುತೂಹಲಗಳಿಗೆ ಓ ಮನಸೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಸ್ಪಷ್ಟ ಉತ್ತರ ನೀಡಲಾಗಿದೆ. ಚಿತ್ರದಲ್ಲಿ ಒಬ್ಬ .
ಪೊಲೀಸ್ ಅಧಿಕಾರಿಯಾಗಿ ನಟ ವಿಜಯ ರಾಘವೇಂದ್ರ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ನಾಯಕಿ ಸಂಚಿತಾ ಪಡುಕೋಣೆ ತನಗೆ ಸಿಕ್ಕಂಥ ಅವಕಾಶದಲ್ಲಿ ನೈಜ ಅಭಿನಯ ನೀಡುವ ಮೂಲಕ ನ್ಯಾಯ ಒದಗಿಸಿದ್ದಾರೆ. ಮತ್ತೊಬ್ಬ ನಾಯಕನ ಪಾತ್ರದಲ್ಲಿ ಧರ್ಮ ಕೀರ್ತಿರಾಜ್ ಎರಡು ಶೇಡ್ಗಳಲ್ಲಿ ನಟಿಸೋ ಮೂಲಕ ಗಮನ ಸೆಳೆಯುತ್ತಾರೆ. ಪೊಲೀಸ್ ಪಾತ್ರದಲ್ಲಿ ಸಾಧು ಕೋಕಿಲ ಅವರು ತಮ್ಮ ಹಾಸ್ಯ ಚಟಾಕಿಗಳ ಮೂಲಕವೇ ಪ್ರೇಕ್ಷಕರನ್ನು ನಗಿಸುತ್ತಾರೆ. ಉಳಿದಂತೆ ಹರೀಶ್ ರಾಯ್, ಶೋಭರಾಜ್, ಕಿಲ್ಲರ್ ವೆಂಕಟೇಶ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಮನರಂಜನೆಯ ಜೊತೆ ಕುತೂಹಲಕಾರಿಯಾಗಿ ಸಾಗುವ ಕಥೆ ನೋಡುಗರಿಗೆ ಇಷ್ಟವಾಗುತ್ತದೆ. ಕನ್ನಡಿಗರಿಗೆ ಒಂದು ಉತ್ತಮ ಚಿತ್ರವನ್ನು ನೀಡಬೇಕೆಂದು ಮುಂದೆ ಬಂದಿರುವ ಐವರು ನಿರ್ಮಾಪಕರ ಧೈರ್ಯವನ್ನ ಮೆಚ್ಚಬೇಕು. ಚಿತ್ರದಲ್ಲಿ ಜೆಸಿ ಗಿಫ್ಟ್ ಅವರ ಸಂಗೀತ ಗಮನ ಸೆಳೆಯುತ್ತದೆ. ಎಂ .ಆರ್. ಸೀನು ಅವರ ಛಾಯಾಗ್ರಹಣ ಉತ್ತಮವಾಗಿದೆ. ಬ್ಯಾಂಕಾಕ್ನಲ್ಲಿ ಶೂಟ್ ಮಾಡಿರುವ ಉಡುಗೊರೆಯ ಕೊಡಲೇ ನೀನು ಹಾಗೂ ಸಖತ್ತಾಗಿದೆ. ಎಲ್ಕಾ ಹಾಡುಗಳು ತುಂಬಾ ಸೊಗಸಾಗಿ ಮೂಡಿಬಂದಿವೆ, ಅದರಲ್ಲೂ ಭೂಮೀನೇ ಕುಸಿದು ಹೋದಂತೆ, ಪ್ರಾಣಾನೇ ಕಳೆದು ಹೋದಂತೆ ಎಂಬ ಪ್ಯಾಥೋ ಸಾಂಗ್ ತುಂಬಾ ಇಂಪ್ರೆಸ್ ಆಗುತ್ತದೆ, ಓ ಮನಸೇ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಆಗಿದ್ದು ಕುಟುಂಬ ಸಮೇತ ಕುಳಿತು ವೀಕ್ಷಿಸಬಹುದು.